ಶಿವಾಜಿ ಗಣೇಶನ್, ವಿಜಯಕಾಂತ್, ರಜನಿಕಾಂತ್, ಪಾರ್ಥಿಬನ್, ಅರ್ಜುನ್ ಸರ್ಜಾ, ವಿಕ್ರಂ, ಧನುಷ್, ಸೂರ್ಯ, ಕಾರ್ತಿ, ವಿಜಯ್, ಅಜಿತ್, ವಿಜಯ್ ಸೇತುಪತಿ.. ಹೀಗೆ ತಮಿಳಿನ ಎಲ್ಲ ಸ್ಟಾರ್`ಗಳಿಗೂ ಸಿನಿಮಾ ಮಾಡಿರುವ ನಿರ್ಮಾಪಕ ಕಲೈಪುರಿ ಎಸ್.ಧಾನು. ಇದೀಗ ಕಿಚ್ಚ ಸುದೀಪ್ ಅವರ 46ನೇ ಚಿತ್ರಕ್ಕೆ ನಿರ್ಮಾಪಕರಾಗುತ್ತಿದ್ದಾರೆ. ಸುದೀಪ್ ಚಿತ್ರಕ್ಕೆ ಡೈರೆಕ್ಟರ್ ಆಗುತ್ತಿರುವುದು ಹೊಸ ಪ್ರತಿಭೆ ಎನ್ನಲಾಗುತ್ತಿದೆ.
ಕಿಚ್ಚ ಸುದೀಪ್ ಹೊಸಬರಿಗೆ ಅವಕಾಶ ಕೊಡುವುದರಲ್ಲಿ ಎತ್ತಿದ ಕೈ. ನಿರ್ದೇಶಕರು ಸುದೀಪ್ ಅವರಿಗೆ ಕನ್ವಿನ್ಸ್ ಮಾಡಬೇಕು. ಅಂತದ್ದೇ ಒಂದು ಬೆಳವಣಿಗೆ ಹೊಸ ಚಿತ್ರದಲ್ಲಿ ಆಗಿದೆ. ಸುದೀಪ್ 46ನೇ ಚಿತ್ರಕ್ಕೆ ಸ್ಟೇಜ್ ಸಿದ್ಧವಾಗಿದೆ. ಈ ಚಿತ್ರ ನಿರ್ಮಾಣ ಮಾಡುತ್ತಿರುವ ಚಿತ್ರ ಸಂಸ್ಥೆ ಟಾಲಿವುಡ್`ನ ಸ್ಟಾರ್ ಪ್ರೊಡಕ್ಷನ್ ಹೌಸ್.
1985ರಿಂದಲೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವ ವಿ.ಕ್ರಿಯೇಷನ್ಸ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದೆ. ಪ್ರೊಡ್ಯೂಸರ್ ಕಲೈಪುರಿ ಎಸ್.ಧಾನು. 90ರ ದಶಕದಲ್ಲಿ ಶಿವಾಜಿ ಗಣೇಶನ್, ವಿಜಯ್ಕಾಂತ್, ಅರ್ಜುನ್, ಪಾರ್ಥಿಬನ್, ಕಮಲ್ ಹಾಸನ್ ಮುಂತಾದವರ ಸಿನಿಮಾಗಳನ್ನು ಧಾನು ನಿರ್ಮಾಣ ಮಾಡಿದ್ದಾರೆ. ವಿಕ್ರಮ್ ಜತೆಗೆ ‘ಕಂದಸ್ವಾಮಿ’, ‘ಸ್ಕೆಜ್’, ‘ದಳಪತಿ’ ವಿಜಯ್ ಜತೆಗೆ ‘ಸಚಿನ್’, ‘ತುಪ್ಪಾಕಿ’, ‘ಥೇರಿ’ಯಂತಹ ಸಿನಿಮಾಗಳಿಗೆ ಹಣ ಹಾಕಿದ್ದಾರೆ. ‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ಸೆನ್ಸೇಷನಲ್ ಸಿನಿಮಾ ‘ಕಬಾಲಿ’ಗೆ ಹಣ ಹಾಕಿದ್ದು ಕೂಡ ಕಲೈಪುಲಿ ಎಸ್ ಧಾನು. ಕಲೈಪುಲಿ ಎಸ್ ಧಾನು ಈಚೆಗೆ ಧನುಷ್ ಜತೆಗೆ ಹೆಚ್ಚು ಕೈ ಜೋಡಿಸುತ್ತಿದ್ದಾರೆ. ವಿಐಪಿ 2, ವೆಟ್ರಿಮಾರನ್ & ಧನುಷ್ ಜೋಡಿಯ ಅಸುರನ್ ಹಾಗೂ ಮಾರಿ ಸೆಲ್ವರಾಜ್ & ಧನುಷ್ ಜೋಡಿಯ ‘ಕರ್ಣನ್’ ಸಿನಿಮಾಗಳಿಗೂ ಕಲೈಪುಲಿ ಎಸ್ ಧಾನು ಬಂಡವಾಳ ಹೂಡಿದ್ದರು.
ಇತ್ತೀಚೆಗೆ ಧನುಷ್ ಜೊತೆ ನಾನೇ ವರುವನ್ ಸಿನಿಮಾ ನಿರ್ಮಾಣ ಮಾಡಿದ್ದ ಕಲೈಪುರಿ ಎಸ್.ಧಾನು, ಈಗ ಸೂರ್ಯ-ವೆಟ್ರಿಮಾರನ್ ಕಾಂಬಿನೇಷನ್ನಿನ ವಾಡಿವಾಸಲ್ ನಿರ್ಮಾಣ ಮಾಡುತ್ತಿದ್ದಾರೆ. ಇದರ ಜೊತೆಯಲ್ಲೇ ಸುದೀಪ್ ಜೊತೆ ಹೊಸ ಸಿನಿಮಾಗೆ ಸೈ ಎಂದಿದ್ದಾರೆ. ಈಗಾಗಲೇ ಸುದೀಪ್ ಅವರು ಟೀಸರ್ ಶೂಟ್ನಲ್ಲಿ ಭಾಗಿಯಾಗಿ ಬಂದಿದ್ದಾರೆ. ಶೀಘ್ರದಲ್ಲೇ ಟೀಸರ್ ಕೂಡ ರಿಲೀಸ್ ಆಗುವ ಸಾಧ್ಯತೆಗಳಿವೆ. ಈ ಸಿನಿಮಾವು ಪ್ಯಾನ್ ಇಂಡಿಯಾ ಸಿನಿಮಾವೇ ಅಥವಾ ಕನ್ನಡ ಮತ್ತು ತಮಿಳಿನಲ್ಲಿ ನಿರ್ಮಾಣವಾಗಲಿದೆಯೇ? ಸದ್ಯಕ್ಕಂತೂ ಮಾಹಿತಿ ಇಲ್ಲ.
ಸುದೀಪ್ ಅವರು ಇತ್ತೀಚೆಗೆ ನಟಿಸಿದ ಹೊಸ ಸಿನಿಮಾ ವಿಕ್ರಾಂತ್ ರೋಣ. ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತ್ತು. ಅದಾದ ನಂತರ ಬಿಗ್ ಬಾಸ್, ಕ್ರಿಕೆಟ್, ರಾಜಕೀಯಗಳಲ್ಲಿ ಮುಳುಗಿ ಹೋಗಿದ್ದರು. ಕಥೆ ಕೇಳುವುದನ್ನೇನೂ ಬಿಟ್ಟಿರಲಿಲ್ಲ. ಆದರೆ.. ಹೊಸ ಸಿನಿಮಾ ಸಸ್ಪೆನ್ಸ್ ಹಾಗೆಯೇ ಇತ್ತು. ಅದಾದ ಮೇಲೆ ಒಟ್ಟೊಟ್ಟಿಗೇ ಮೂರು ಚಿತ್ರಗಳಿಗೆ ಯೆಸ್ ಎಂದಿದ್ದ ಸುದೀಪ್, ಈಗ ಮೊದಲ ಚಿತ್ರದ ಸುದ್ದಿ ಬಿಟ್ಟುಕೊಟ್ಟಿದ್ದಾರೆ. ಇನ್ನೊಂದೆಡೆ ಸುದೀಪ್ ಇನ್ನೂ ಕೆಲವು ಪ್ರಾಜೆಕ್ಟುಗಳಿಗೆ ಯೆಸ್ ಎಂದಿದ್ದಾರೆ. ಅಲ್ಲದೆ ಸುದೀಪ್ ಅವರು ಜಾಹೀರಾತುಗಳಲ್ಲೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.



