13 ವರ್ಷಗಳ ಹಿಂದೆ.. ಪಂಚರಂಗಿ ಅನ್ನೋ ಸಿನಿಮಾ ಬಂದಿತ್ತು. ತುಂಟಾಟದ ಮಾತು, ನಗುವಿನ ಮೂಲಕವೇ ಪ್ರೇಕ್ಷಕರ ಮನಸ್ಸಿಗೆ ಹೃದಯಕ್ಕೆ ಲಗ್ಗೆ ಹಾಕಿದ್ದರು ನಿಧಿ ಸುಬ್ಬಯ್ಯ. ಅದಾದ ಮೇಲೆ ಕನ್ನಡದಲ್ಲಿ ಹಿಟ್ ಎನಿಸಿದ್ದ ನಿಧಿ ನಟಿಸಿದ್ದ ಚಿತ್ರವೆಂದರೆ ಕೃಷ್ಣನ್ ಮ್ಯಾರೇಜ್ ಸ್ಟೋರಿ. ಅದಾದ ಮೇಲೆ ಹಿಂದಿಗೆ ಹಾರಿದ ನಿಧಿಗೆ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಮದುವೆಯೂ ಆಯಿತು. ಡೈವೋರ್ಸ ಕೂಡಾ ಆಯಿತು. ಮತ್ತೆ ಚಿತ್ರರಂಗಕ್ಕೆ ಬಂದಿರುವ ನಿಧಿ ಇದೀಗ ಉಪೇಂದ್ರ ಜೊತೆ ಯುಐ, ಎಡಗೈಯೇ ಅಪಘಾತಕ್ಕೆ ಕಾರಣ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಹೊಸ ಹೆಜ್ಜೆಯನ್ನೂ ಇಟ್ಟಿದ್ದಾರೆ. ನಿಧಿ ಸುಬ್ಬಯ್ಯ ಈಗ ಗಾಯಕಿಯಾಗಿದ್ದಾರೆ.
ಈ ಕೊಡಗಿನ ಚೆಲುವೆಗೆ ಹಾಡುವುದು ಹವ್ಯಾಸ. ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ನಿಧಿ ಸುಬ್ಬಯ್ಯ ಅವರು ಹಾಡುವ ರೀಲ್ಸ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದವು. ಆ ರೀಲ್ಸ್ ಗಳೇ ಈಗ ನಿಧಿ ಅವರನ್ನು ಅಧಿಕೃತವಾಗಿಯೇ ಗಾಯಕಿಯನ್ನಾಗಿಸಿವೆ. ನಿಧಿ ಅವರನ್ನು ಸಿಂಗರ್ ಮಾಡಿರುವುದು ಯೋಗರಾಜ ಭಟ್ಟರು.
ಯೋಗರಾಜ್ ಭಟ್ ಅವರ ಜೊತೆ ನಾನು ಈ ಮೊದಲು ಪಂಚರಂಗಿಯಲ್ಲಿ ನಟಿಸಿದ್ದೆ. ನನ್ನ ವೃತ್ತಿ ಜೀವನದ ಸೂಪರ್ ಹಿಟ್ ಚಿತ್ರಗಳಲ್ಲಿ ಅದೂ ಒಂದು. ಈಗ ಅದೇ ಯೋಗರಾಜ್ ಭಟ್ ಅವರ ಹೊಸ ಚಿತ್ರದಲ್ಲಿ ಹಾಡಿದ್ದೇನೆ. ಈಗಲೂ ಎಷ್ಟೋ ಜನ ನನ್ನನ್ನು ಪಂಚರಂಗಿ ನಿಧಿ ಎಂದೇ ಕರೆಯುತ್ತಾರೆ. ಅಷ್ಟರಮಟ್ಟಿಗೆ ಆ ಸಿನಿಮಾ ಜನರಿಗೆ ಇಷ್ಟವಾಗಿತ್ತು. ಇತ್ತೀಚೆಗೆ ಭಟ್ ಸರ್ ನನ್ನನ್ನು ಕರೆದು ಹಾಡುತ್ತೀರಾ ಎಂದು ಕೇಳಿದರು. ಈಗ ಭಟ್ಟರೇ ನನ್ನನ್ನು ಸಿಂಗರ್ ಆಗಿ ಲಾಂಚ್ ಮಾಡುತ್ತಿದ್ದಾರೆ ಎಂದು ಖುಷಿಯಾಗಿ ಹೇಳಿಕೊಳ್ತಾರೆ ನಿಧಿ ಸುಬ್ಬಯ್ಯ.
13 ವರ್ಷಗಳ ನಂತರ ಭಟ್ ಸರ್ ಜೊತೆ ಮತ್ತೆ ಕೆಲಸ ಮಾಡುತ್ತಿದ್ದೇನೆ. ಅದೊಂದು ಖುಷಿಯಾದರೆ, ಗಾಯಕಿಯಾಗಿ ಲಾಂಚ್ ಕೂಡಾ ಆಗುತ್ತಿದ್ದೇನೆ ಎನ್ನುವ ನಿಧಿ, ಈ ಹಾಡು ಯಾವ ಸಿನಿಮಾದ್ದು ಅನ್ನೋದನ್ನ ಗುಟ್ಟಾಗಿಯೇ ಇಟ್ಟಿದ್ದಾರೆ. ಕ್ಲಾಸಿಕಲ್ ಸಾಂಗ್ ಎನ್ನುವುದು ಅವರು ಕೊಡ್ತಿರೋ ಉತ್ತರ.



