ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆಯೇ ಎಲ್ಲ ಪಕ್ಷಗಳಲ್ಲೂ ವಲಸೆ, ಪಕ್ಷಾಂತರ, ಜಂಪಿಂಗ್ ಶುರುವಾಗಿ ಹೋಗಿದೆ. ಅತೀ ಹೆಚ್ಚು ಪಕ್ಷಾಂತರವಾಗಿರುವುದು ಜೆಡಿಎಸ್ ಪಕ್ಷಕ್ಕೆ. ಕಾಂಗ್ರೆಸ್ ಹಾಗೂ ಬಿಜೆಪಿ ಟಿಕೆಟ್ ಘೋಷಣೆ ನಂತರ ಅತೀ ಹೆಚ್ಚು ನಾಯಕರು, ಟಿಕೆಟ್ ಆಕಾಂಕ್ಷಿಗಳು ಮತ್ತು ಟಿಕೆಟ್ ವಂಚಿತರು ಜೆಡಿಎಸ್ ಸೇರಿದ್ದಾರೆ. ಒಂದು ಲೆಕ್ಕದಲ್ಲಿ ಜೆಡಿಎಸ್ಗೆ ಇದು ಸುಗ್ಗಿ ಕಾಲ. ಆದರೆ ರಾಜ್ಯಮಟ್ಟದಲ್ಲಿ ಬಹುವಾಗಿ ಚರ್ಚೆಯಾಗಿದ್ದು ಕೆಲವು ಪ್ರಮುಖ ನಾಯಕರದ್ದು.
ಬಿಜೆಪಿಯಿಂದ ಈ ಬಾರಿ ವಲಸೆ ಹೋದವರಲ್ಲಿ ಅನೇಕರಿದ್ದಾರೆ. ಮಾಜಿ ಶಾಸಕರಿದ್ದಾರೆ. ಶಾಸಕರಾಗಿದ್ದುಕೊಂಡೇ ರಾಜೀನಾಮೆ ಕೊಟ್ಟು ಎದ್ದು ನಡೆದವರಿದ್ದಾರೆ. ಅವರಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್. ಸವದಿ ಮೂಲತಃ ಬಿಜೆಪಿಯವರಲ್ಲ. ಜನತಾ ಪರಿವಾರದಿಂದ ಬಂದವರು. ಈಗ ಕಾಂಗ್ರೆಸ್ ಸೇರಿದ್ದಾರೆ.
ಬಿಜೆಪಿಯಲ್ಲಿದ್ದ, ಎಲೆಕ್ಷನ್ ಸೋತಿದ್ದವರನ್ನು ಉಪಮುಖ್ಯಮಂತ್ರಿ ಮಾಡಿದೆವು. ಮಂತ್ರಿ ಮಾಡಿದೆವು. ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದೆವು. ಅವರಿಗೆ ನಿಯತ್ತಿಲ್ಲ ಎಂದು ಬಿಜೆಪಿಯವರು ಟೀಕಿಸುತ್ತಿದ್ದರೆ, ನಿಮಗೆ ನನ್ನ ಬಗ್ಗೆ ಮಾತನಾಡೋಕೆ ನೈತಿಕತೆಯೇ ಇಲ್ಲ ಎಂದು ಗುಡುಗುತ್ತಿದ್ದಾರೆ ಲಕ್ಷ್ಮಣ ಸವದಿ. ಸವದಿ ಬೆಳಗಾವಿಯ ಪ್ರಮುಖ ಲಿಂಗಾಯತ ನಾಯಕ. ಈ ಮೂಲಕ ಲಾಭವಾಗಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್ಸಿನದ್ದು. ಲಕ್ಷ್ಮಣ ಸವದಿ ರಾಜಕೀಯದಲ್ಲಿರೋದಕ್ಕೆ ಮಾನ ಮರ್ಯಾದೆ ಇಲ್ಲ. ನಾಚಿಕೆ ಇಲ್ಲ. ಬ್ಲೂಫಿಲ್ಮ್ ರಾಜಕಾರಣಿ ಎಂದೆಲ್ಲ ಟೀಕಿಸಿದ್ದ ಕಾಂಗ್ರೆಸ್ಸಿಗರು, ಈಗ ಅದೇ ನಾಯಕನನ್ನು ಇಂದ್ರ ಚಂದ್ರ ಎಂದು ಹೊಗಳಬೇಕು. ರಾಜಕೀಯದಲ್ಲಿ ಅದು ಕಾಮನ್ ಬಿಡಿ.
ಅವರ ಜೊತೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ ಕೂಡಾ ಲಿಂಗಾಯತ ನಾಯಕರೇ. ಇವರ ಮೂಲಕವೂ ಕಾಂಗ್ರೆಸ್ಸಿಗೆ ಲಿಂಗಾಯತ ಬಲ ಬರಲಿದೆ ಎನ್ನುವ ನಿರೀಕ್ಷೆ, ಆಸೆ ಕಾಂಗ್ರೆಸ್ ನಾಯಕರದ್ದು. ಅಂದಹಾಗೆ ಸಿಎಂ ಆಗುವವರೆಗೆ ಜಗದೀಶ್ ಶೆಟ್ಟರ್ ಆ ಭಾಗದ ಅವರ ಕ್ಷೇತ್ರದ ನಾಯಕರಷ್ಟೆ. ಸಿಎಂ ಆದ ಮೇಲೆ ಖ್ಯಾತಿ ಮತ್ತು ಶಕ್ತಿ ಇನ್ನೊಂದೈದಾರು ಕ್ಷೇತ್ರಗಳಿಗೆ ವಿಸ್ತರಿಸಿತು. ಆದರೆ ಬಲ ಬರಲಿದೆಯಾ ಎಂದು ನೋಡಿದರೆ 2013ರ ಚುನಾವಣೆ ನೆನಪಿಸ್ತಾರೆ ಬಿಜೆಪಿ ಲೀಡರ್ಸ್. ಆಗ ಯಡಿಯೂರಪ್ಪ ಕೆಜೆಪಿ ಕಟ್ಟಿದ್ದರು. ಆಗ ಸಿಎಂ ಆಗಿದ್ದ ಶೆಟ್ಟರ್ ನೇತೃತ್ವದಲ್ಲೇ ಎಲೆಕ್ಷನ್ ಎದುರಿಸಿ, ಹೀನಾಯ ಸೋಲು ಕಂಡಿದ್ದೆವು. ಶೆಟ್ಟರ್ ಯಾವ ಪರಿಣಾಮವನ್ನೂ ಮಾಡಲ್ಲ ಎನ್ನುವುದು ಅವರ ವಾದ.
ಹೀಗೆ ಲಿಂಗಾಯತ ನಾಯಕರ ಬುಟ್ಟಿಗೆ ಕಾಂಗ್ರೆಸ್ ಕೈ ಹಾಕಿದ್ದರೆ, ಅತ್ತ ಕಾಂಗ್ರೆಸ್ಸಿನ ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ಗೆ ಗುಡ್ ಬೈ ಹೇಳುತ್ತಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿ ರಾಜ್ಯ ಮಟ್ಟದ ನಾಯಕರಂತೂ ಖಂಡಿತಾ ಅಲ್ಲ. ಆದರೆ ರಾಜ್ಯ ಮಟ್ಟದಲ್ಲಿಯೇ ಏಕೆ, ರಾಷ್ಟ್ರಮಟ್ಟದಲ್ಲಿಯೂ ಅಖಂಡ ಹೆಸರು ಗೊತ್ತು. ಕಳೆದ ಬಾರಿ ಕಾಂಗ್ರೆಸ್ಸಿನಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಅತೀ ಹೆಚ್ಚು ಮತಗಳ ಅಂತರದಲ್ಲಿ ಗೆದ್ದಿದ್ದ ಅಖಂಡ, ಯಾರೋ ಮಾಡಿದ ತಪ್ಪಿಗೆ ಮನೆಯನ್ನೇ ಕಳೆದುಕೊಂಡವರು. ನವೀನ್ ಎಂಬ ಯುವಕ ಮುಸ್ಲಿಂ ಧರ್ಮದ ಅವಹೇಳನ ಮಾಡಿದ ಎಂಬ ಕಾರಣಕ್ಕೆ, ಮುಸ್ಲಿಂ ಯುವಕರು ಇವರ ಮನೆಯನ್ನೇ ಸುಟ್ಟುಬಿಟ್ಟರು. ಕೊನೆಗೆ ಮನೆ ಸುಟ್ಟವರನ್ನೇ ಹೊಗಳಬೇಕಾದ ಇಕ್ಕಟ್ಟಿಗೆ ಸಿಲುಕಿ, ಅದನ್ನೂ ಮಾಡಿದ ಅಖಂಡ, ಕಣ್ಣೀರಿಟ್ಟರೂ, ಗೋಗರೆದರೂ ಟಿಕೆಟ್ ಸಿಕ್ಕಿಲ್ಲ. ಅಂದಹಾಗೆ ಅಖಂಡ ಶ್ರೀನಿವಾಸ ಮೂರ್ತಿ ಮೂಲಕ ಜೆಡಿಎಸ್`ನವರು. ಸಿದ್ದರಾಮಯ್ಯ ಜೊತೆಯಲ್ಲಿದ್ದವರು. ಜಮೀರ್ ಅಹ್ಮದ್ ಅವರಿಗೆ ಆಪ್ತರು. ಆದರೆ ಕೆಲವೇ ಕೆಲವು ಮುಸ್ಲಿಂ ಮೌಲ್ವಿಗಳ ಹೇಳಿಕೆಗೆ ಕಾಂಗ್ರೆಸ್ ಹೆದರಿದೆ. ಅದಕ್ಕೆ ಟಿಕೆಟ್ ಕೊಟ್ಟಿಲ್ಲ ಎನ್ನುತ್ತಿವೆ ಒಂದು ಮೂಲಗಳು. ಇನ್ನೊಂದು ಮೂಲದ ಪ್ರಕಾರ ಅಖಂಡ ಅವರ ಮನೆಗೆ ಬೆಂಕಿಯಿಟ್ಟ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಸಂಪತ್ ರಾಜ್, ಡಿಕೆ ಶಿವಕುಮಾರ್ ಆಪ್ತ.
ಒಟ್ಟಿನಲ್ಲಿ ಅತ್ತ ಲಿಂಗಾಯತರಿಗೆ ಬಿಜೆಪಿಯಲ್ಲಿ ಅನ್ಯಾಯವಾಗಿದೆ ಎನ್ನುತ್ತಿರುವ ಇದೇ ಕಾಂಗ್ರೆಸ್ಸಿಗರು, ತಮ್ಮದೇ ಪಕ್ಷದಲ್ಲಿ ನೊಂದಿರುವ ದಲಿತ ಶಾಸಕನಿಗೆ ಅನ್ಯಾಯ ಮಾಡಿ ಹೊರಕಳಿಸುತ್ತಿರೋದು ಯಾವ ನ್ಯಾಯ..? ದಲಿತ ಸಂಘಟನೆಗಳದ್ದೂ ದಿವ್ಯ ಮೌನ. ಕಾಂಗ್ರೆಸ್ಸಿನ ದಲಿತ ನಾಯಕರದ್ದೂ ದಿವ್ಯ ಮೌನ. ಇದು ಖಂಡಿತಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹೊಡೆತ ಕೊಡಲಿದೆ ಎಂಬ ನಿರೀಕ್ಷೆ ಬಿಜೆಪಿಯದ್ದು.



