ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ಅವರ ವೈವಾಹಿಕ ಜೀವನ ಆರಂಭವಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಅದ್ಧೂರಿಯಾಗಿ ನಡೆದಿದೆ. ಒಕ್ಕಲಿಗ ಸಂಪ್ರದಾಯದಂತೆ, ಕರ್ಕಾಟಕ ಲಗ್ನದಲ್ಲಿ ಅಭಿಷೇಕ್, ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ. ಜೂನ್ 7ರಂದು ಗ್ರ್ಯಾಂಡ್ ರಿಸೆಪ್ಷನ್ ನೆರವೇರಲಿದೆ. ಅಭಿಷೇಕ್ ಅವರು ತಮ್ಮ ಕೈಯಲ್ಲಿ ರೆಬಲ್, ಸುಮಾ, ಅವಿವಾ ಮತ್ತು ಮಂಡ್ಯ ಎಂಬ ಹೆಸರುಗಳ ಮೆಹೆಂದಿ ಹಾಕಿಸಿಕೊಂಡಿದ್ದರು. ಹಲವು ವರ್ಷಗಳ ತಮ್ಮ ಪ್ರೀತಿಗೆ ಈಗ ಅಭಿ-ಅವಿವಾ ದಾಂಪತ್ಯದ ಮುದ್ರೆ ಒತ್ತಿದ್ದಾರೆ.
ಅಂಬಿ ಮಗನ ಮದುವೆಗೆ ರಜನಿಕಾಂತ್, ಚಿರಂಜೀವಿ, ಮೋಹನ್ ಬಾಬು, ಸುದೀಪ್, ಯಶ್, ಸುಹಾಸಿನಿ, ಭಾರತಿ ವಿಷ್ಣುವರ್ಧನ್, ಅಶ್ವಿನಿ ಪುನೀತ್ ರಾಜಕುಮಾರ್, ಅನಿರುದ್ಧ, ಪ್ರಣೀತಾ ಸುಭಾಷ್, ನರೇಶ್-ಪವಿತ್ರಾ ಲೋಕೇಶ್, ಗುರುಕಿರಣ್, ಪ್ರಜ್ವಲ್ ದೇವರಾಜ್, ರಾಗಿಣಿ ಚಂದ್ರನ್, ಮೇಘನಾ ರಾಜ್, ಪ್ರಿಯಾಂಕಾ ಉಪೇಂದ್ರ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಚಿವ ಎಂ.ಬಿ. ಪಾಟೀಲ್, ಮಾಜಿ ಸಚಿವ ಅಶ್ವತ್ಥ್ ನಾರಾಯಣ್… ಸೇರಿದಂತೆ ಗಣ್ಯರ ದಂಡು ಮದುವೆಯಲ್ಲಿತ್ತು. ಇನ್ನು ರಾಕ್`ಲೈನ್ ವೆಂಕಟೇಶ್, ದೊಡ್ಡಣ್ಣ ಅಂಬರೀಷ್ ಅವರಿಗೆ ಮನೆಯವರೇ ಆಗಿದ್ದು, ಮದುವೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು.
ಮದುವೆಗೆ ಆಗಮಿಸಿದ್ದ ಸುದೀಪ್ ದಂಪತಿ ಚಿನ್ನದ ಹಾರವನ್ನು ಗಿಫ್ಟ್ ಆಗಿ ಕೊಟ್ಟರು. ವಿಶೇಷವೆಂದರೆ ಅಭಿಷೇಕ್ ಅವರ ಪತ್ನಿ ಅವಿವಾ ಬಿದ್ದಪ್ಪ, ಪತಿ ಅಭಿಷೇಕ್`ಗೆ ಕಾರ್`ವೊಂದನ್ನು ಗಿಫ್ಟ್ ಆಗಿ ಕೊಟ್ಟರು. ಅದೇ ಕಾರಿನಲ್ಲಿಯೇ ಅಭಿ-ಅವಿವಾ ಒಂದು ರೌಂಡ್ ಹೋಗಿ ಬಂದರು.
ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಅಂದು ಎಲ್ಲಾ ಸೆಲೆಬ್ರಿಟಿಗಳು ಭಾಗಿ ಆಗಿ ಔತಣ ಸ್ವೀಕರಿಸಲಿದ್ದಾರೆ.
ವಿಶೇಷವೆಂದರೆ ಅಂಬರೀಷ್ ಪುತ್ರನ ಮದುವೆಯೆಂದರೆ ಇಡೀ ಚಿತ್ರರಂಗ ಒಟ್ಟಿಗೇ ಸೇರುತ್ತಿತ್ತು. ಅದರಲ್ಲಿ ಎರಡು ಮಾತಿಲ್ಲ. ಆದರೆ ಅಂಬರೀಷ್ ಈಗಿಲ್ಲ. ಅದಕ್ಕಾಗಿಯೇ ಏನೋ.. ಅಭಿಷೇಕ್ ಮದುವೆಯಲ್ಲಿ ಕೆಲವರ ಗೈರು ಹಾಜರಿ ಎದ್ದು ಕಂಡಿದ್ದಂತೂ ಸತ್ಯ. ಸಿದ್ದರಾಮಯ್ಯ, ಡಿಕೆ, ಬೊಮ್ಮಾಯಿ, ಯಡಿಯೂರಪ್ಪ ರಾಜಕೀಯ ಲೆಕ್ಕಕ್ಕೆ ತೆಗೆದುಕೊಂಡರೆ, ಸಿನಿಮಾ ಇಂಡಸ್ಟ್ರಿ ಲೆಕ್ಕದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಬಿಟ್ಟರೆ ಬೇರೆಯವರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಶತ್ರುಘ್ನ ಸಿನ್ಹಾ, ಕಮಲಹಾಸನ್, ಮೋಹನ್ ಲಾಲ್, ಮುಮ್ಮಟ್ಟಿಯವರೂ ಇರಲಿಲ್ಲ. ಹಾಗೆಂದು ಅವರೆಲ್ಲ ಸುಮಲತಾ ಅವರಿಂದ ದೂರವಾಗಿದ್ದಾರೆ ಎಂತಲ್ಲ. ಆರತಕ್ಷತೆಗೆ ಬರಬಹುದು. ಆದರೆ.. ಇದೆಲ್ಲವನ್ನು ನೋಡಿದಾಗ ಅಂಬಿ ಇದ್ದಿದ್ದರೆ.. ಎಂಬ ಭಾವನೆ ಅಭಿಮಾನಿಗಳಲ್ಲಿ ಮೂಡಿದ್ದಂತೂ ಸುಳ್ಳಲ್ಲ.



